ನೀವು ಸುಲಭವಾಗಿ ಹೆಸರು ಮಾಡ್ಬೇಕಾ? ಹಣದ ಹೊಳೆ ನಿಮ್ಮ ಪಾದ ತಳದಲ್ಲಿ ಹರೀಬೇಕಾ? ಹಾಗಿದ್ರೆ ಅದಕ್ಕಿಲ್ಲಿದೆ ನೋಡಿ ಕ್ರಿಮಿನಲ್ ಐಡಿಯಾ.
ಅದೇನಂದ್ರೆ ಸಿಂಪಲ್ ಆಗಿ ವೇಷ ಹಾಕ್ಬೇಕು. ಜನರನ್ನ ನಂಬಿಸಬೇಕು. ಆಗೇನು ಆಗುತ್ತೇ ಗೊತ್ತಾ? ಜನ ಮರುಳೋ.. ಜಾತ್ರೆ ಮರುಳೋ ಅಂತಾರಲ್ಲ, ಹಾಗಾಗುತ್ತೆ ಕಥೆ.
ಹೌದು, ಈಗ ನಾನು ಹೇಳಕ್ಕೆ ಹೊರಟಿರೋದು ಅಂತಹುದ್ದೆ ಕಥಾನಕವನ್ನ.
ಸನ್ಯಾಸಾಶ್ರಮ ಅಂದ್ರೆ ಅದೊಂದು ಆದರ್ಶಮಯ ಜೀವನ ಅನ್ನೋ ಕಾಲವೊಂದಿತ್ತು. ಆದ್ರೆ, ಹೇಳಿ ಕೇಳಿ ಇದು ಕಲಿಗಾಲ. ಈ ಕಾಲದಲ್ಲಿ ಅದೇನೇನು ನಡೆಯುತ್ತೆ ಅಂತ ಯಾರಿಗೆ ತಾನೆ ಗೊತ್ತು ಹೇಳಿ? ಕಲಿಗಾಲ ಅನ್ನೋ ಈ ಆಧುನಿಕ ಯುಗದಲ್ಲಿ ಕೆಲವರಿಗೆ ದೇವರು ಕೂಡ ಬಂಡವಾಳ. ಅಷ್ಟೆ ಅಲ್ಲ, ಧ್ಯಾನ, ಸನ್ಯಾಸಾಶ್ರಮ ಅನ್ನೋದು ಬರೀ ಮೋಕ್ಷಕ್ಕೆ ಮಾತ್ರ ದಾರಿ ಅಲ್ಲ. ಕಣ್ಣ ರೆಪ್ಪೆ ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಹಣ-ಹೆಸರು ಮಾಡೋ ಹೊಸ ಐಡಿಯಾನೂ ಹೌದು.
ಹಾಗಂತ ಎಲ್ರೂ ಇದೇ ತರ ಇರ್ತಾರೆ ಅಂತ ಅಲ್ಲ. ನಮ್ಮ-ನಿಮ್ಮ ನಡುವೆ ಒಳ್ಳೆಯವ್ರು ಇರ್ತಾರೆ, ಕೆಟ್ಟವ್ರು ಇರ್ತಾರೆ. ಆದ್ರೆ, ಯಾರು ಒಳ್ಳೆಯವ್ರು ಮತ್ತು ಅದ್ಯಾರು ಕೆಟ್ಟವ್ರು ಅಂತ ಗೊತ್ತಾಗೋದು ಅವ್ರ ನಿಜ ಬಣ್ಣ ಬಯಲಾದಾಗ ಮಾತ್ರ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಸ್ವಾಮಿ ನಿತ್ಯಾನಂದ.
ಈ ಸನ್ಯಾಸಿ ಮಾಡಿದ ತಪ್ಪಾದ್ರೂ ಏನು ಅನ್ನೋದು ಈಗಾಗ್ಲೆ ಜಗಜ್ಜಾಹೀರ. ಹಾಗಂತ ತಪ್ಪೇ ಮಾಡದೇ ಇರೋರು ಇಲ್ಯಾರಿದ್ದಾರೆ? ನಾನು ಸಂಪೂರ್ಣ ಪರಿಪೂರ್ಣ ಅಂತ ಎದೆತಟ್ಕೊಂಡು ಹೇಳೋ ಮಂದಿ ನಮ್ಮ ನಿಮ್ಮ ನಡುವೆ ಖಂಡಿತವಾಗಿಯೂ ಇಲ್ಲ ಅಂತಾನೆ ಹೇಳ್ಬಹುದೇನೋ.
ನಿತ್ಯಾನಂದ ಕೂಡ ಇದಕ್ಕೆ ಹೊರತಲ್ಲ ಅಂತ ಸುಮ್ಮನಾಗಿಬಿಡಬಹುದಿತ್ತು. ಆದರೆ, ವಿಷಯ ಹಾಗಿಲ್ಲ. ತಾನು ಸಾಚಾ ಆಗಿದು, ಸಮಾಜಕ್ಕೆ ಆದರ್ಶ ಬೋಧಿಸಬೇಕಿದ್ದ ಈ ಕಾವಿಧಾರಿ ಅತ್ಯಂತ ಅಸಹ್ಯಕರ ರೀತಿಯಲ್ಲಿ ಸಿಕ್ಕಿಬಿದ್ದ. ಆತನ ಕಾಣದ ಮುಖ ಹೀನಾಯವಾಗಿ ಬಯಲಾಯ್ತು.
ಹೀಗೆ ವಿಷಯ ಬಯಲಾಗಿದ್ದೆ ತಡ, ಮಾನ-ಮರ್ಯಾದೆ ಉಳಿಸಿಕೊಳ್ಳಲು ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸ್ವತಃ ದೇವಮಾನವ ಅನಿಸಿಕೊಂಡಿರೋ ನಿತ್ಯಾನಂದ ಪರದಾಡಿದ ಪರಿ ಇದೆಯಲಾ, ಅದೇ ಒಂದು ರೋಚಕ ಕಥಾನಕ. ಇಲಿ ಬಿಲವನ್ನು ಹೊಕ್ಕಂತೆ, ಯಾರಿಗೂ ಸಿಕ್ಕದಂತೆ ಉತ್ತರದ ನಾಡುಗಳಲ್ಲಿ ಅಡಗಿಕೊಳ್ಳಲು ನಿತ್ಯಾನಂದ ಹುಡುಕದ ತಾಣಗಳಿಲ್ಲ. ಮುಖ ಮುಚ್ಚಿಕೊಳ್ಳಲು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಕೊನೆಗೊಂದು ದಿನ ನಿತ್ಯಾನಂದ ವಾಸ್ ಅಂಡರ್ ಅರೆಸ್ಟ್.
ತಾನು ಅಡಗಿಕೊಂಡಿದ್ದ ತಾಣವನ್ನು ಭೇದಿಸಿ ಪೊಲಿಸ್ರು ಅರೆಸ್ಟ್ ಮಾಡಿದ್ರೂ ಈತ ಮಾತ್ರ ಹಸನ್ಮುಖಿ. ಅದೇನೋ ಹೇಳ್ತಾರಲ್ಲಾ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂತ. ಹಾಗಾಯಿತು ನಿತ್ಯಾನಂದನ ಪರಿ. ಇರಲಿ ಈ ವಿಷಯ ಬೇರೆ. ಅಷ್ಟಕ್ಕೂ ನಿತ್ಯಾನಂದ ಅರೆಸ್ಟ್ ಆದ ವಿಷಯ ಇದೆಯಲ್ಲಾ, ಆವತ್ತಿಗೆ ಅದೇ ಒಂದು ದೊಡ್ಡ ಮಜುಗರದ ಪ್ರಸಂಗ.
ಮುಜುಗರಕ್ಕೆ ಒಂದಷ್ಟು ಮಣ್ಣಾಕ್ತು. ನಾನೇನು ಮಾಡಬಾರದನ್ನ ಮಾಡಿದ್ದೀನಿ ಅಂತ ಈ ಕಾವಿಧಾರಿ ಸ್ವಾಮಿ ಅನ್ಕೊಂಡಿರಬಹುದು. ಅದು ಸರಿನೇ ಬಿಡಿ. ಕಾವಿ ಧರಿಸಿಕೊಂಡೇ ಈತ ಹೆಣ್ಣೊಬ್ಬಳ ಸಂಗ ಮಾಡಿದ ವಿಷಯ ಜಗಜ್ಜಾಹೀರಾಗಿದ್ದು; ಪೊಲೀಸ್ರು ಇವನನ್ನ ಅರೆಸ್ಟ್ ಮಾಡಿದ್ದು ಎಲ್ಲದೂ ಹಳೆ ವಿಷಯವೇ. ಆದ್ರೆ, ನಿಜವಾಗ್ಲು ಇದ್ರಲ್ಲಿ ಈತನ ತಪ್ಪಿತ್ತೆ? ಅಥವಾ ಬೇಕಂತ್ಲೆ ಇವನನ್ನು ಸಿಕ್ಕಿಹಾಕಿಸಲಾಯಿತೇ? ಏನೇ ಆದ್ರೂ, ಅಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರಲ್ವಂತೆ. ಹಾಗಾಯಿತು ನಿತ್ಯಾನಂದನ ಕತೆ.
‘ಹೆಣ್ಣೊಬ್ಬಳ ಸಂಗ ಮಾಡಿ ನಿತ್ಯಾನಂದ ಮಾಡಿಕೊಂಡಿದ್ದು ಶುದ್ಧ ಅವಿವೇಕಿ ಕೆಲಸ. ಅಷ್ಟೇ ಅಲ್ಲ, ನಂಬಿದ ಭಕ್ತರ ಭಾವನೆಗಳಿಗೆ ಎಸಗಿದ ದ್ರೋಹ ಅಂತ ಹೇಳೋರ ಸಂಖೈ ಕಡಿಮೆ ಏನಿಲ್ಲ. ಮಾಡಿದ ದ್ರೋಹಕ್ಕೆ ಪ್ರಾಯಶ್ಚಿತ್ತಪಡಬೇಕಾದ ಈ ಕಾವಿಧಾರಿ ಅದೊಂದನ್ನು ಬಿಟ್ಟು ಎಲ್ಲವನ್ನೂ ಮಾಡ್ತಾ ಆರಾಮಾಗಿದ್ದಾನೆ. ಅಸಲಿಗೆ, ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಕ್ಕಿಬಿದ್ದ ಈ ಸ್ವಾಮೀಜಿಯ ಅಸಲಿ ರೂಪವೇನು? ಈತ ಹೇಳುವಂತೆ, ಈತನ ಸೆಕ್ಸ್ ಸ್ಕ್ಯಾಂಡಲ್ ಪೂರ್ವನಿಯೋಜಿತ ಪಿತೂರಿನಾ ಅಥವಾ ಸಹಜನಾ? ಕುತೂಹಲವಂತು ಇದ್ದೇ ಇದೆ ಅಲ್ವಾ ?
ನೀವು ಒಮ್ಮಿಂದೊಮ್ಮೆಗೇ ಪ್ರಚಾರಕ್ಕೆ ಬರಬೇಕಾ? ಆ ಪ್ರಚಾರ ಪಾಸಿಟಿವ್ನೋ ಅಥವಾ ನೆಗೆಟೀವ್ನೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಚಾರ ಸಿಕ್ಕರೆ ಪಾಪ್ಯುಲಾರಿಟಿ ತಾನೇ ಬರುತ್ತದೆ. ಈಗ ನಿತ್ಯಾನಂದನ ವಿಷಯದಲ್ಲಿ ಆಗಿರೋದು ಅದೇ. ಸೆಕ್ಸ್ ಸ್ಕ್ಯಾಂಡಲ್ ಬೆಳಕಿಗೆ ಬಂದ ಮೇಲೆ ನಿತ್ಯಾನಂದನ ಪಾಪ್ಯುಲಾರಿಟಿ ಇನ್ನೂ ಹೆಚ್ಚಾಗಿದೆಯಂತೆ. ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಬೇರೆ ವಿಷಯ. ಅಷ್ಟಕ್ಕೂ ಈತನ ಸೆಕ್ಸ್ ಸ್ಕ್ಯಾಂಡಲ್ನ ಹಕೀಕತ್ತು ಏನು? ಈ ಸ್ಕ್ಯಾಂಡಲ್ ಹಿಂದೆ ಕಾಣದ ಕೈ ಕೆಲಸ ಮಾಡಿದೆಯೇ? ಹೀಗೆ ಪ್ರಶ್ನೆ ಹಾಕಿಕೊಂಡ್ರೆ ಹೊಳೆಯುವ ಹೆಸ್ರು ಅಂದ್ರೆ...
ನಿತ್ಯಾನಂದ ವರ್ಸಸ್ ರವಿಶಂಕರ ಗುರೂಜಿ
ಯಸ್. ಒಬ್ಬರು ಕಾವಿಧಾರಿ ಮತ್ತೊಬ್ಬರು ಶ್ವೇತವಸ್ತ್ರಧಾರಿ. ಆಧ್ಯಾತ್ಮ ಮತ್ತು ಧ್ಯಾನ ಈ ಇಬ್ಬರ ನಡುವಿನ ಸಾಮ್ಯ. ಈ ಸಾಮ್ಯ ಇಷ್ಟಕ್ಕೆ ಮುಗಿಯಲ್ಲ. ರವಿಶಂಕರ ಗುರೂಜಿ ಅವರ ಆರ್ಟ್ ಲಿವಿಂಗ್ ಮತ್ತು ನಿತ್ಯಾನಂದನ ಧ್ಯಾನಪೀಠ ಆಶ್ರಮದ ನೆಲೆ ಒಂದೇ. ಅದೇ ಬೆಂಗಳೂರು.
ಇಲ್ಲೊಂದು ಮಾತು. ಹತ್ತು ವರ್ಷದ ಹಿಂದಕ್ಕೆ ಪುಟ ತಿರುವಿ ಹಾಕಿ. ನಿತ್ಯಾನಂದ ಅಥವಾ ರವಿಶಂಕರ್ ಗುರೂಜಿ ಅವರ ಕಲರವ ನಮ್ಮ ಈ ಬೆಂಗಳೂರಿನಲ್ಲಿ ಇರ್ಲೇ ಇಲ್ಲ. ಆದ್ರೆ, ನೋಡನೋಡುತ್ತಿದ್ದಂತೆ ಅವರ ಕ್ರಿಯೆ, ಚಟುವಟಿಕೆ, ಪ್ಲಾನ್ ಮತ್ತು ಪ್ರಚಾರ ಇವರನ್ನು ಜಗದಗಲಕ್ಕೆ ಬೆಳೆದು ನಿಲ್ಲುವಂತೆ ಮಾಡಿಬಿಟ್ತು. ಪಾಪ್ಯುಲಾರಿಟಿಯನ್ನು ತಂದು ಕೊಟ್ಟಿತು. ಬೆನ್ನಲ್ಲೆ ಅನುಯಾಯಿಗಳ ಸಂಖ್ಯೆಯೂ ಹೆಚ್ಚತೊಡಗಿತು. ಅಂಗೈಯಲ್ಲೇ ಸ್ವರ್ಗವನ್ನು ತೋರಿಸುವ ಚಮತ್ಕಾರಗಳೂ ನಡೆದು ಹೋದವು.
ಮೊದಮೊದಲು ಆರ್ಟ್ ಆಫ್ ಲಿವಿಂಗ್ಗೆ ಕಾಂಪಿಟೇಟರ್ ಅನ್ನೋರು ಯಾರು ಇರಲಿಲ್ಲ. ಆದ್ರೆ, ಈಗ ನೋಡಿ. ಪಕ್ಕದಲ್ಲೆ ಶುರುವಾಯಿತು ಸವತಿ ಮತ್ಸರ. ಅದೇ, ಸ್ವಾಮಿ ನಿತ್ಯಾನಂದನ ಧ್ಯಾನಪೀಠ. ಸವತಿ ಮತ್ಸರ ಅಂದ್ಮೇಲೆ ಕೇಳಬೇಕೆ? ಈರ್ಷೆ ಅನ್ನೋದು ಮನುಷ್ಯ ಸಹಜ ಗುಣ ತಾನೆ ? ನೋಡನೋಡುತ್ತಿದ್ದಂತೆ ಒಬ್ಬರನ್ನೊಬ್ಬರು ಮೀರಿಸಲು ತೊಡಗಿದರು. ದೇಶ-ವಿದೇಶಿಯರನ್ನು ಗುಂಪುಗುಂಪಾಗಿ ಸೆಳೆಯತೊಡಗಿದರು.
ಅದೊಂದು ದಿನ ನಿತ್ಯಾನಂದನ ಲೀಲೆ ಟಿವಿಯಲ್ಲಿ ಬಹಿರಂಗವಾಗಿದ್ದೇ ತಡ, ರವಿಶಂಕರ್ ಗುರೂಜಿ ಖುಷಿಯಿಂದ ಎದ್ದುಬಿಟ್ಟರು. ಇಷ್ಟು ದಿನ ಮನಸ್ಸಿನಲ್ಲಿದ್ದ ಟೀಕೆಗಳೆಲ್ಲ ಹೊರಬರತೊಡಗಿದವು. ನಿತ್ಯಾನಂದನನ್ನು ಬಹಿರಂಗವಾಗಿಯೇ ಟೀಕಿಸಿದರು. ಇದೆಲ್ಲ ಆದ ನಂತರ, ನನಗ್ಯಾರು ಸಾಟಿ ಅಂದ್ಕೊತಿದ್ದವರಿಗೆ ಇನ್ನೊಂದು ವರ ಅನಾಯಾಸವಾಗಿ ದಕ್ಕಿತು. ಮೊನ್ನೆ ಮೊನ್ನೆಯಷ್ಟೇ ಆರ್ಟ್ ಆಫ್ ಲಿವಿಂಗ್ನಲ್ಲಿ ನಡೀತಲ್ಲ ಶೂಟೌಟ್! ಅದು ರವಿಶಂಕರ್ಗೆ ಇನ್ನಷ್ಟು ಪ್ರಚಾರ ಕೊಟ್ಟಿತು. ಆದರೆ, ಅಲ್ಲೆಲ್ಲೋ ಮಳೆಯಾದರೆ ಇಲ್ಲೆಲ್ಲೋ ನೆಗಡಿ ಶುರುವಾದಂತೆ, ಶೂಟೌಟ್ ಪ್ರಕರಣಕ್ಕೂ, ತಮ್ಮ ಧ್ಯಾನಪೀಠಕ್ಕೂ ಯಾವುದೇ ಸಂಬಂಧ ಇಲ್ಲ ಅನ್ನೋ ಸ್ಪಷ್ಟನೆ ನಿತ್ಯಾನಂದನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಗೊಂಡಿತು.
ಇರಲಿ, ಈ ವಿಷಯವೇ ಬೇರೆ. ಹಾಗಂತ ನಿತ್ಯಾನಂದನ ಸೆಕ್ಸ್ ಸ್ಕ್ಯಾಂಡಲ್ಗೂ ರವಿಶಂಕರ ಗುರೂಜಿ ಅವರಿಗೂ ಸಂಬಂಧ ಇದೆ ಅಂತ ಅರ್ಥವಲ್ಲ. ಅದಕ್ಕೆ ಯಾವುದೇ ಆಧಾರವೂ ಇಲ್ಲ. ಮೇಲ್ನೋಟಕ್ಕೆ ಗೋಚರಿಸುವುದು ಮಾತ್ರ ಎರಡೂ ಆಶ್ರಮಗಳ ನಡುವಿನ ಸವತಿ ಮತ್ಸರ ಮಾತ್ರ.
ಅಷ್ಟಕ್ಕೂ ಆರ್ಟ್ ಆಫ್ ಲಿವಿಂಗ್ಗೂ ನಿತ್ಯಾನಂದನ ಸೆಕ್ಸ್ ಸ್ಕ್ಯಾಂಡಲ್ಗೂ ಸಂಬಂಧ ಕಲ್ಪಿಸಲು ಪುರಾವೆ ಇಲ್ಲವೆಂದ ಮೇಲೆ, ಸ್ಪಷ್ಟನೆ ನೀಡಿದ ಹಕೀಕತ್ತು ಏನೂ ಅನ್ನೋದನ್ನ ಸ್ವತಃ ನಿತ್ಯಾನಂದನೇ ಹೇಳಬೇಕು. ಶೂಟೌಟ್ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಅಂತ ಹೇಳಿದ್ದಾನೆಯೇ ವಿನಃ ಸತ್ಯ ಏನು ಅನ್ನೋದನ್ನ ಆತ ಈವರೆಗೆ ಬಾಯಿಬಿಟ್ಟಿಲ್ಲ.
ಹಾಗೆ ನೋಡಿದ್ರೆ, ನಿತ್ಯಾನಂದ, ಸ್ತ್ರೀಯ ಸಂಗದಂಥ ಗಂಡಿನ ಕೆಲಸ ಮಾಡಲು ಸಾಧ್ಯವೇ ಇಲ್ಲ ಅನ್ನೋ ಮಾತಿದೆ. ನಿತ್ಯಾನಂದನ ಹಾವಭಾವ ಮತ್ತು ವರ್ತನೆ ನೋಡಿದ್ರೆ ಈ ವಿಷಯ ಸ್ಪಷ್ಟವಾಗುತ್ತೆ ಅಂತ ಹೇಳೋರು ಇದ್ದಾರೆ. ಆದ್ರೆ, ನಿತ್ಯಾನಂದ ಸ್ತ್ರೀಸಂಗ ಮಾಡಿಯೇ ಇಲ್ಲ ಅಂತ ಹೇಳೋಕ್ಕೂ ಆಗಲ್ಲ. ‘ತನ್ನಿಚ್ಚೆಯಂತೆ ಅವನ ಜತೆ ಇದ್ದೆ ಅಂತ ಅವರೊಂದಿಗಿದ್ದ ಚಿತ್ರನಟಿಯೇ ಬಹಿರಂಗ ಹೇಳಿಕೆ ನೀಡಿದ್ದಾಳೆ.
ಒಂದು ವೇಳೆ, ನಿತ್ಯಾನಂದ ಅಂತಹ ಕೆಲಸ ಮಾಡಿದ್ದ ಅಂತ ಇಟ್ಕೊಳ್ಳೋಣ. ‘ಅದರಲ್ಲೇನು ತಪ್ಪು? ಇಬ್ಬರು ವಯಸ್ಕರ ನಡುವೆ ಪರಸ್ಪರ ಒಪ್ಪಿಗೆಯಿಂದ ನಡೆಯಬಹುದಾದ ಲೈಂಗಿಕ ಕ್ರಿಯೆಗೆ ಕಾನೂನಿನ ಒಪ್ಪಿಗೆಯೇ ಇದೆ. ಅದಕ್ಕೆ ಶಿಕ್ಷೆಯಿಲ್ಲ ಅನ್ನೋರ ಸಂಖ್ಯೆ ಕೂಡ ಕಡಿಮೆ ಏನಿಲ್ಲ.
ಇದೇನೇ ಆಗಲಿ, ನಿತ್ಯಾನಂದ ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಲುಕಿಕೊಂಡ. ತಲೆಮರೆಸಿಕೊಂಡ. ಕೊನೆಗೆ ಜೈಲಲ್ಲಿ ಕಂಬಿ ಎಣಿಸೋ ಸ್ಥಿತಿ ತಂದುಕೊಂಡ. ಈ ಸ್ಕ್ಯಾಂಡಲ್ ಹಿಂದಿನ ಕಾರಣ ಮತ್ತು ಮರ್ಮ ಈಗಲೂ ನಿಗೂಢ.
ಸತ್ಯ ಹೇಳ್ಬೇಕಾದ ನಿತ್ಯಾನಂದ ಜೈಲು ಸೇರಿಕೊಂಡ. ಆದ್ರೂ ತನ್ನ ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ ಇದ್ದದ್ದು ಇದ್ದಹಾಗೆ ಹೇಳೋ ಉಸಾಬರಿಗೆ ಹೋಗ್ಲಿಲ್ಲ. ಜೈಲಲ್ಲಿದ್ದರೂ ನಿರುಮ್ಮಳನಾಗಿದ್ದ. ಅಲ್ಲೇ ಜಪತಪ ಮಾಡ್ತಿದ್ನಂತೆ ಮಹಾರಾಯ. ಆದರೆ, ಕಂಪ್ಲೆಂಟೇ ಇಲ್ಲದ ನಿತ್ಯಾನಂದನಿಗೆ ಕಾನೂನು ಏನು ಮಾಡುತ್ತೆ ಅಂತ ಇಲ್ಲೊಂದು ಆರ್ಗ್ಯುಮೆಂಟ್ ಇದೆಯಲ್ಲಾ? ಈ ಕುರಿತ ಒಂದಷ್ಟು ಕಣ್ಣಾಯಿಸೋಣ..
ಹಾಗೆ ನೋಡಿದ್ರೆ.. ನಿತ್ಯಾನಂದ ಅವತಾರ ಪುರುಷನೇನಲ್ಲ. ಆತ ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಸಾಮಾನ್ಯ ಕುಟುಂಬವೊಂದರಲ್ಲಿ. ಹೀಗೆ ಬೆಳೆದ ನಿತ್ಯಾನಂದ ಭಕ್ತರ ಪಾಲಿಗೆ ಪರಮಹಂಸನಾದ. ಇವನಿಗೆ ಈ ಬಿರುದು ಕೊಟ್ಟ ಪುಣ್ಯಾತ್ಮರ್ಯಾರು ಅನ್ನೋದು ಯಾರಿಗೂ ಗೊತ್ತಿಲ್ಲ. ಬಹುಶಃ ನಿತ್ಯಾನಂದನಿಗೆ ನಿತ್ಯಾನಂದನೇ ಸಾಟಿ ಇರಬೇಕು ಅನ್ಸುತ್ತೆ. ಏನೇ ಇರಲಿ, ಇಷ್ಟು ದಿನ ಜೈಲು ಹಕ್ಕಿಯಾಗಿದ್ದ ನಿತ್ಯಾನಂದ ಈಗ ಮುಕ್ತ ಹಕ್ಕಿ. ರಿಲೀಸ್ ನಂತರ ಯಜ್ಞ-ಯಾಗ ಶುರು ಹಚ್ಕೊಂಡಿದ್ದಾನೆ. ಇಂಥ ನಿತ್ಯಾನಂದ ಕಾನೂನಿಗೆ ತಲೆ ಬಾಗ್ತಾನೋ ಅಥವಾ ಸೆಡ್ಡು ಹೊಡೀತಾನೋ ?
ಅದೇನ ಇದ್ರು ಈಗ ಕಂಬಿ ಹಿಂದೆ ಕಾವಿಧಾರಿ? ಯಸ್. ಅನುಮಾನವೇ ಬೇಡ. ಈತನೇ ನಿತ್ಯಾನಂದ ಸ್ವಾಮಿ. ಕರ್ಮ ಅಂದ್ರೆ ಇದೇ ಅಲ್ವಾ? ಧರ್ಮ-ಕರ್ಮ ಅನ್ಕೊಂಡು ಕಂಡಕಂಡವರಿಗೆ ಬೋಧನೆ ಮಾಡ್ತಿದ್ದ ಸ್ವಾಮಿಗೆ ಬಂದ ಸ್ಥಿತಿ ನೋಡಿ. ಇದೆಲ್ಲಾ ಯಾಕ್ ಬೇಕಿತ್ತು ಹೇಳಿ? ಆಯಿತು, ಆಗಿದ್ದೆಲ್ಲಾ ಆಗಿಹೊಯ್ತು. ನಡೆಯಬಾರದ್ದೆಲ್ಲಾ ನಡೆದು ಹೋಯ್ತು. ನಿತ್ಯಾನಂದನಿಗೆ ಈಗ ಬಿಡುಗಡೆಯ ಭಾಗ್ಯ.
ಇಷ್ಟೆಲ್ಲಾ ಆದ್ಮೇಲೂ ನಿತ್ಯಾನಂದನಿಗೆ ಅನುಯಾಯಿಗಳ ಕೊರತೆಯೇನಿಲ್ಲ. ಆಗಿದ್ದು ಆಗ್ಹೊಯ್ತು. ಕಂ ಕಮ್, ವೆಲ್ಕಂ ಅಂತಿದ್ದಾರೆ ಅನುಯಾಯಿಗಳು...
ಇದಿಷ್ಟೆ ಅಲ್ಲ. ಪ್ರಮೋದ್ ಮುತಾಲಿಕ್ ಕೂಡ ನಿತ್ಯಾನಂದನಿಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಹಾಗೆ ಸರ್ಟಿಫಿಕೇಟ್ ಕೊಡಿ ಅಂತ ಇವ್ರಿಗೆ ಅದ್ಯಾರು ಕೇಳಿದ್ರೂ ಗೊತ್ತಿಲ್ಲ. ಇವರ ಪ್ರಕಾರ. ನಿತ್ಯಾನಂದನ ಕರ್ಮಕಾಂಡವೆಲ್ಲಾ ಕ್ರಿಶ್ಚಿಯನ್ ಮಿಷನರಿಗಳ ಪಿತೂರಿ.
ಪ್ರಮೋದ್ ಮುತಾಲಿಕ್ ಅವರು ನಿತ್ಯಾನಂದನ್ನ ಸಮರ್ಥಿಸಲಿ ಬಿಡಲಿ. ಆದ್ರೆ, ಕೋರ್ಟ್ ಕಟಕಟೆಯಲ್ಲಿ ಈತನ ವಿರುದ್ಧ ಇರೋ ಕೇಸ್ ಅದೇನಾಗುತ್ತೆ ಅಂತ ನೋಡೋಣ ಬನ್ನಿ.
ಅಸಲಿಗೆ, ನಿತ್ಯಾನಂದ ಜೈಲಿನಿಂದ ಬಿಡುಗಡೆಯಾಗಿ ಬಂದಿರೋದು ಹೇಗೆ ಗೊತ್ತಾ? ನಿತ್ಯಾನಂದ ತನಗೆ ಅತ್ಯಾಚಾರ ಮಾಡಿದ ಅಂತ ಯಾರೊಬ್ರು ವೈಯಕ್ತಿಕವಾಗಿ ದೂರು ಕೊಟ್ಟಿಲ್ಲ. ಮೀಡಿಯಾದವ್ರು ಪ್ರಕರಣವನ್ನು ವೈಭವೀಕರಿಸಿವೆ. ಇದರಿಂದ ಸ್ವಾಮೀಜಿಯ ವ್ಯಕ್ತಿತ್ವಕ್ಕೆ ಮತ್ತು ಅವರ ಅನುಯಾಯಿಗಳ ನಂಬಿಕೆಗೆ ಧಕ್ಕೆ ಉಂಟಾಗಿದೆ ಅನ್ನೋ ಆರ್ಗ್ಯುಮೆಂಟ್ ಇದೆ. ಹೀಗಾಗಿ, ಬೇಲ್ ಸಿಕ್ತು.
ಅಷ್ಟೇ ಅಲ್ಲ. ಪರಸ್ಪರ ಒಪ್ಪಿಗೆಯೊಂದಿಗೆ ಇಬ್ಬರು ವಯಸ್ಕರು ಶಯನ ಗೃಹದಲ್ಲಿ ಏಕಾಂತದಲ್ಲಿರುವಾಗ ಅದನ್ನು ಗುಪ್ತವಾಗಿ ಚಿತ್ರೀಕರಣ ಮಾಡಿದ್ದು ಮತ್ತು ಅದನ್ನು ಪ್ರಸಾರ ಮಾಡಿದ್ದು ಬಹುದೊಡ್ಡ ತಪ್ಪು. ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಇಲ್ಲಿ ಆಗಿದ್ದು ಉಲ್ಟಾ ಅನ್ನೋ ವಾದವನ್ನು ವಕೀಲರು ಹರಿಯಬಿಟ್ಟಿದ್ದಾರೆ.
ಇಷ್ಟಾದ ಮೇಲೆ ಕೋರ್ಟಲ್ಲಿ ಕೇಸು ತಿರುಗು ಬಾಣ ಆಗೋ ಹಾಗಿದೆ ಅನ್ನೋ ಅಭಿಪ್ರಾಯ ಯಾರಿಗಾದ್ರೂ ಬಂದ್ರೆ, ಅದ್ರಲ್ಲಿ ಅಚ್ಚರಿ ಪಡುವುದೇನಿಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಸಿಓಡಿ ಪೊಲೀಸ್ರು ಕಡಿದು ಕಟ್ಟೆ ಹಾಕಿದ್ದೇನು ಅನ್ನೋ ಪ್ರಶ್ನೆ ಕೂಡ ಸಹಜ. ಆದ್ರೆ, ಒಂದಂತು ನಿಜ. ಕೋರ್ಟ್ ಕಟಕಟೆಯಲ್ಲಿ, ತಾಂತ್ರಿಕ ನೆಲೆಯಲ್ಲಿ ನಿತ್ಯಾನಂದನ ವಕೀಲರ ವಾದ ಏನೇ ಇರಬಹುದು. ಆದ್ರೆ, ನಿತ್ಯಾನಂದ ಕಾವಿ ಧರಿಸಿ, ಸಮಾಜವನ್ನು ನಂಬಿಸಿದವ. ಆದ್ದರಿಂದ, ನೈತಿಕವಾಗಿ ತಾನು ಮಾಡಿದ್ದೆಷ್ಟು ಸರಿ ಅಂತ ಉತ್ತರಿಸಬೇಕಾದ್ದು ಧರ್ಮ. ಆದ್ರೆ, ಅದ್ಯಾವ ಗೋಜಿಗೂ ಹೋಗದ ನಿತ್ಯಾನಂದ, ಜೈಲಿನಿಂದ ಹೊರಬಂದಾಗಿನಿಂದ ಪಂಚಾಗ್ನಿ ತಪಸ್ಸಿನ ಮೊರೆ ಹೊಕ್ಕಿದ್ದಾನೆ. ಲೋಕಕಲ್ಯಾಣ ಮತ್ತು ವಿಶ್ವಶಾಂತಿ ಇದರ ಹಿಂದಿನ ಉದ್ದೇಶವಂತೆ. ಉದ್ದೇಶ ಏನೇ ಇರಬಹುದು, ನಿತ್ಯಾನಂದ ಅಥವಾ ಬೇರೆ ಯಾರೇ ಇರಬಹುದು ಸಮಾಜವನ್ನು ಮರುಳು ಮಾಡಬಾರದು ಅಲ್ವಾ ?
ಹಾಗೆ ನೋಡಿದ್ರೆ.. ಧರ್ಮದ ಹೆಸರಲ್ಲಿ ನಡೆಯೋ ಅನಾಹುತಗಳಿಗೆ ಕೊನೆ ಎಂಬುದಿಲ್ಲ. ಲೀಗಲ್ ಬ್ಯಾಟಲ್ನಲ್ಲಿ ನಿತ್ಯಾನಂದ ಗೆಲ್ಬಹುದು ಅಥವಾ ಸೋಲ್ಬಹುದು. ಆದ್ರೆ, ಎಲ್ಲದಕ್ಕೂ ನೈತಿಕತೆ ಮುಖ್ಯ. ಇದು ಕೇವಲ ನಿತ್ಯಾನಂದನ ವಿಷಯ ಮಾತ್ರ ಅಲ್ಲ. ಪರರಲ್ಲಿ ತಪ್ಪು ಹುಡುಕುವ ನಾವು, ಅದಕ್ಕೂ ಮುನ್ನ ಸ್ವಂತ ನೈತಿಕತೆ ಕಾಪಾಡಿಕೊಳ್ಳುವುದು ಮುಖ್ಯ ಅಂತ ತಾನೆ ?
- ಅಲೀಮ್
